Friday, June 19, 2015

ಬ್ಲಾಸ್ಟ್ - 2



ಹಲೋ....

ಹೇಳಿ ವಿಜಯ್, ಏನಾದರೂ ಮಾಹಿತಿ ಸಿಕ್ತ?

ಸರ್, ಇಂಟೆಲಿಜೆನ್ಸ್ ಪ್ರಕಾರ ಯಾವುದೇ ಬೆದರಿಕೆಯಾಗಲಿ ಸಂದೇಶವಾಗಲಿ ಬಂದಿಲ್ಲ ಎಂದು ತಿಳಿದು ಬಂತು. ಇನ್ನು ಬಸ್ ಕಳುವಾಗಿರುವ ಬಗ್ಗೆಯೂ ಯಾವುದೇ ಕಂಪ್ಲೇಂಟ್ ರಿಜಿಸ್ಟರ್ ಆಗಿಲ್ಲ ಸರ್... ಯಾರೋ, ಪಕ್ಕಾ ಪ್ಲಾನ್ ಮಾಡಿ ಯಾವುದೇ ಕ್ಲೂ ಬಿಡದೆ ಕೆಲಸ ಮಾಡಿದ್ದಾರೆ ಸರ್... ಈಗ ಇನ್ನು ನಮಗೆ ಉಳಿದಿರುವ ಒಂದೇ ದಾರಿ ಎಂದರೆ ಡ್ರೈವರ್... ಅವನನ್ನು ಕಂಡು ಹಿಡಿದರೆ ಮಾತ್ರ ನಮಗೆ ಏನಾದರೂ ಮಾಹಿತಿ ಸಿಗಬಹುದು... ಇಲ್ಲದಿದ್ದರೆ ಬಹಳ ಕಷ್ಟ...

ಹೌದು ವಿಜಯ್... ನಿಮ್ಮ ಮಾತು ನಿಜ, ಡ್ರೈವರ್ ಒಬ್ಬನೇ ಈಗ ನಮಗೆ ಉಳಿದಿರುವ ಆಧಾರ. ಆದಷ್ಟು ಬೇಗ ಅವನನ್ನು ಹುಡುಕಲು ಪ್ರಯತ್ನಿಸಿ.

ಸರ್...ಅಲ್ಲಿ ಏನಾದರೂ ಮಾಹಿತಿ ಸಿಕ್ತ?

ಇನ್ನೂ ಇಲ್ಲ ವಿಜಯ್, ಬ್ಲಾಸ್ಟ್ ನಡೆದ ಆಚೆ ಕಿಮೀ ಈಚೆ ಕಿಮೀ ಯಾವುದೇ ಹಳ್ಳಿಯಾಗಲಿ ಊರಾಗಲಿ ಇಲ್ಲ... ಹಾಗಾಗಿ ಬಸ್ ಮೂರು ದಿನ ಎಲ್ಲಿತ್ತು ಎಂಬುದನ್ನು ಪತ್ತೆ ಮಾಡಬೇಕಿದೆ. ಬಸ್ಸನ್ನು ಯಾರೂ ಇಲ್ಲದ ಜಾಗದಲ್ಲಿ ಬ್ಲಾಸ್ಟ್ ನೋಡಿದರೆ ಅವರಿಗೆ ಯಾರನ್ನೂ ಸಾಯಿಸುವ ಉದ್ದೇಶ ಇದ್ದ ಹಾಗಿಲ್ಲ, ಬದಲಿಗೆ ಇದರ ಹಿಂದೆ ಬೇರೇನೋ ಉದ್ದೇಶ ಇದ್ದ ಹಾಗಿದೆ.... ನನಗೆ ಇನ್ನೂ ಒಂದು ಅನುಮಾನ ಕಾಡುತ್ತಿದೆ ಬೇರೆ ಯಾವುದೋ ಸಂಚು ಮಾಡಲು, ಇದನ್ನು ಸೃಷ್ಟಿಸಿ ನಮ್ಮ ದಾರಿ ತಪ್ಪಿಸುತ್ತಿದ್ದಾರ ಎಂದು... ಎಲ್ಲದಕ್ಕೂ ಡ್ರೈವರ್ ಒಬ್ಬನಿಂದಲೇ ನಮಗೆ ಉತ್ತರ ಸಿಗುವುದು... ಹ್ಮ್ .. ನೋಡೋಣ ನಾವು ಇವತ್ತು ಹಳ್ಳಿಗಳಲ್ಲಿ ವಿಚಾರಣೆ ಮಾಡಲು ಹೋಗುತ್ತಿದ್ದೇವೆ. ಅದರಿಂದ ಏನಾದರೂ ಪ್ರಯೋಜನ ಇದೆಯೋ ಎಂದು... ಯಾವುದಕ್ಕೂ ನೀವು ಕಾಂಟಾಕ್ಟ್ ನಲ್ಲಿರಿ ಎಂದು ಕರೆಯನ್ನು ಕಟ್ ಮಾಡಿ ವಿಚಾರಣೆಗೆ ಹೊರಟರು.

ಅಕ್ಕ ಪಕ್ಕದ ಹಳ್ಳಿಗಳಲ್ಲಿ ಮಾಡಿದ ವಿಚಾರಣೆಗಳಿಂದಲೂ ಯಾವುದೇ ಸುಳಿವು ಸಿಗದಿದ್ದಾಗ ಅಭಿಮನ್ಯು ಹತಾಶನಾಗಿ ವಾಪಸ್ ಹೊರಡುವ ಹೊತ್ತಿನಲ್ಲಿ ಊರಾಚೆ ಇದ್ದ ಸೈಕಲ್ ಪಂಕ್ಚರ್ ಹಾಕುವ ಹುಡುಗ ಬಂದು, ಸರ್ ಮೂರು ದಿನದಿಂದ ಬಸ್ ಅಲ್ಲಿ ರಸ್ತೆ ಮಧ್ಯೆ ಇರುವ ಕೆರೆ ಬಳಿ ಇತ್ತು ಎಂದು ಹೇಳಿದ. ಇನ್ನೇನಾದರೂ ವಿಷಯ ಗೊತ್ತಾ ಎಂದು ಕೇಳಿದ್ದಕ್ಕೆ ಇಲ್ಲ ಸರ್ ಎಂದು ಹೇಳಿ ಹೊರಟು ಹೋದ. ಹುಡುಗ ಕೊಟ್ಟ ಮಾಹಿತಿಯನ್ನು ಆಧರಿಸಿ ಅಭಿಮನ್ಯುವಿನ ತಂಡ ಕೆರೆ ಬಳಿ ಬಂದು ಏನಾದರೂ ಸುಳಿವು ಸಿಗಬಹುದೇನೋ ಎಂದು ಹುಡುಕಲು ಶುರು ಮಾಡಿದರು. ಸತತ ಎರಡು ಗಂಟೆ ಹುಡುಕಿದರೂ ಯಾವುದೇ ಮಾಹಿತಿ ದೊರೆಯಲಿಲ್ಲ.

ಅಲ್ಲಿಂದ ಹತಾಶರಾಗಿ ಬರುತ್ತಿದ್ದಾಗ ವಿಜಯ್ ಕುಮಾರ್ ಕರೆ ಮಾಡಿದರು. ಸರ್ ನಿಮ್ಮ ಊಹೆ ನಿಜ ಆಗುತ್ತಿದೆ ಎಂಬ ಸಂದೇಹ ಬರುತ್ತಿದೆ ಸರ್. ಈಗಷ್ಟೇ ಒಂದು ಕರೆ ಬಂದಿತ್ತು. ಹೊಸಕೋಟೆಯಲ್ಲಿರುವ SBI ಬ್ಯಾಂಕ್ ನಲ್ಲಿ ದರೋಡೆ ಆಗಿದೆ ಎಂದು. ಸುಮಾರು ಕೋಟಿಗಳಷ್ಟು ಹಣ ಮತ್ತು ಒಡವೆಗಳು ಕಳುವಾಗಿದೆ ಎಂಬ ಮಾಹಿತಿ ಬಂದಿದೆ. ಇದನ್ನು ಮಾಡಿರುವವರು ಯಾರೋ ಬಸ್ಸನ್ನು ಸ್ಫೋಟಿಸಿ ನಮ್ಮ ದಿಕ್ಕು ತಪ್ಪಿಸಲು ಪ್ರಯತ್ನಿಸಿದ್ದಾರೆ ಅನಿಸುತ್ತಿದೆ.

ದರೋಡೆ.... ಯಾವಾಗ?

ಸರ್...ಇಂದು ಬೆಳಿಗ್ಗೆ ಬ್ಯಾಂಕ್ ತೆರೆದಾಗ ಸಂಗತಿ ಬೆಳಕಿಗೆ ಬಂದಿದೆ.

ವಿಜಯ್... ಹಾಗಿದ್ದರೆ ಬಸ್ ಸ್ಫೋಟ ಇವತ್ತು ಆಗಬೇಕಿತ್ತು....ಸ್ಫೋಟ ಆಗಿರುವುದು ಮೊನ್ನೆ... ದರೋಡೆ ಆಗಿರುವುದು ಇಂದು... ನನಗೇನೋ ಅದಕ್ಕೆ ಇದಕ್ಕೆ ಸಂಬಂಧ ಇಲ್ಲ ಎನಿಸುತ್ತಿದೆ. ಅಂದ ಹಾಗೆ ಯಾರಿಗೆ ಒಪ್ಪಿಸಿದ್ದಾರೆ ದರೋಡೆ ಕೇಸನ್ನು?
ಸರ್...ಈಗ ಪ್ರಾಥಮಿಕ ತನಿಖೆಗೆ ಅಜಯ್ ಕುಮಾರ್ ಹೋಗಿದ್ದಾರೆ... ಮುಂದೆ ಯಾರನ್ನು ನೇಮಿಸಬೇಕೆಂದು ಚರ್ಚೆ ನಡೆಯುತ್ತಿದೆ. ನನ್ನನ್ನು ಕೇಳಿದರು... ನಾನು ಮತ್ತು ನೀವು ಸ್ಫೋಟದ ತನಿಖೆಯಲ್ಲಿ ಇದೀವಿ ಎಂದು ಹೇಳಿದ್ದಕ್ಕೆ ಸರಿ ನಾವು ಯೋಚಿಸಿ ಹೇಳುತ್ತೇವೆ... ಹೇಗಿದ್ದರೂ ಸ್ಫೋಟದ ತನಿಖೆ ಸಧ್ಯಕ್ಕೆ ಮುಗಿಯುವ ಹಾಗೆ ಕಾಣುತ್ತಿಲ್ಲ, ಅಲ್ಲಿಗೆ ಒಬ್ಬರಿದ್ದರೆ ಸಾಕು ಇನ್ನೊಬ್ಬರನ್ನು ದರೋಡೆ ಕೇಸ್ ಗೆ ನೇಮಿಸುತ್ತೇವೆ ಎಂದು ಹೇಳಿದ್ದಾರೆ.... ಆದರೆ ಯಾರೆಂದು ಚರ್ಚಿಸಿ ತಿಳಿಸುತ್ತಾರಂತೆ.

ಓಹೋ... ಸರಿ ಸರಿ... ಈಗ ಇದನ್ನು ಏನು ಮಾಡುವುದು ವಿಜಯ್?

ಅದೇ ತಿಳಿಯುತ್ತಿಲ್ಲ ಸರ್, ಇದ್ಯಾವುದೋ ದೊಡ್ಡ ಜಾಲ ಇದ್ದ ಹಾಗಿದೆ... ದರೋಡೆ ಆಗಿರುವ ಮೊತ್ತ ಸುಮಾರು ಐದು ಕೋಟಿಯಷ್ಟು ಇರಬಹುದು ಎಂದು ಅಂದಾಜಿಸಲಾಗುತ್ತಿದೆ.. ಸರ್, ಒಂದು ನಿಮಿಷ.... IG ಕರೆ ಮಾಡುತ್ತಿದ್ದಾರೆ... ನಾನು ಮತ್ತೆ ನಿಮಗೆ ಕರೆ ಮಾಡುತ್ತೇನೆ.

ಹತ್ತು ನಿಮಿಷದ ನಂತರ.

ಹಲೋ, ಸರ್ IG ಹೇಳಿದ್ರು... ಈ ಕೂಡಲೇ ನಾವಿಬ್ಬರೂ ಸ್ಫೋಟದ ಕೇಸ್ ಬಿಟ್ಟು ದರೋಡೆ ಕೇಸನ್ನು ತೆಗೆದುಕೊಳ್ಳಬೇಕು ಎಂದು ಹೇಳಿದ್ದಾರೆ. ಸಂಜೆಯ ಒಳಗೆ IG ಆಫೀಸ್ ಗೆ ಬರಲು ಹೇಳಿದ್ದಾರೆ.

ಓಕೆ ವಿಜಯ್, ನಾನು ಈ ಕೂಡಲೇ ಹೊರಟು ಬರುತ್ತೇನೆ. ಅಲ್ಲಿ ಬಂದು ಫೋನ್ ಮಾಡುತ್ತೇನೆ. ಒಟ್ಟಿಗೆ IG ಆಫೀಸ್ ಗೆ ಹೋಗೋಣ.

ಸಂಜೆ

IG ಆಫೀಸ್ ಹೊರಗಡೆ, ವಿಜಯ್, ಅಭಿಮನ್ಯು ಮತ್ತು ಕಮಿಷನರ್ ನಡುವೆ ಮಾತುಕತೆ ನಡೆಯುತ್ತಿತ್ತು. ವಿಜಯ್ ಮತ್ತು ಅಭಿಮನ್ಯು ಈ ದರೋಡೆ ಕೇಸನ್ನು ಆದಷ್ಟು ಬೇಗ ಪತ್ತೆ ಹಚ್ಚಬೇಕು...ಆ ಬಸ್ ಸ್ಫೋಟದ ತನಿಖೆ ಬೇರೊಂದು ತಂಡಕ್ಕೆ ವಹಿಸಿದ್ದೇನೆ. ಅದೂ ಅಲ್ಲದೆ ಅದರಲ್ಲಿ ಯಾವುದೇ ಸುಳಿವು ಸಿಗುತ್ತಿಲ್ಲ, ಸುಮ್ಮನೆ ಅದರ ಬಗ್ಗೆ ತಲೆ ಕೆಡಿಸಿಕೊಂಡು ಕೂತಿದ್ದರೆ... ಆಗುವ ಕೆಲಸವೂ ಆಗುವುದಿಲ್ಲ. IG ಬೆಳಿಗ್ಗೆ ಸುಮಾರು ಅರ್ಧ ಗಂಟೆ ಮಾತಾಡಿ ನಿಮ್ಮಿಬ್ಬರನ್ನೇ ಈ ಕೇಸಿಗೆ ನೇಮಿಸಬೇಕು ಎಂದು ಖುದ್ದಾಗಿ ಹೇಳಿ ಕರೆಸಿದ್ದಾರೆ.

ಅಷ್ಟರಲ್ಲಿ IG ಬಂದು ಮೂವರೂ ಒಳಗೆ ಹೋಗಿ ಸುಮಾರು ಒಂದು ಗಂಟೆಯ ಚರ್ಚೆಯ ನಂತರ ಆಚೆ ಬಂದು, ಅಭಿಮನ್ಯು ಮತ್ತು ವಿಜಯ್ IG ಹೇಳಿದ್ದು ಕೇಳಿದ್ರಿ ಅಲ್ಲವೇ... ಮೂರು ದಿನದ ಒಳಗೆ ಅವರಿಗೆ ದರೋಡೆಯ ರಹಸ್ಯ ಭೇಧಿಸಿ ಫಲಿತಾಂಶ ನೀಡಬೇಕು. ನಾಳೆಯ ಒಳಗೆ ಪ್ರಾಥಮಿಕ ವರದಿ ಬೇಕು... ನೀವು ನಾಳೆ ಬೆಳಿಗ್ಗೆಯೇ ಹೊಸಕೋಟೆಗೆ ಹೊರಟು ತನಿಖೆ ಶುರು ಮಾಡಿ.

ಓಕೆ ಸರ್, ನಮ್ಮ ಪ್ರಯತ್ನ ನಾವು ಮಾಡುತ್ತೇವೆ ಎಂದು ಹೇಳಿ ಇಬ್ಬರೂ ಅಲ್ಲಿಂದ ಹೊರಟು ಮಾರ್ಗ ಮಧ್ಯದಲ್ಲಿ ತಾವು ಆಗಾಗ ಮದ್ಯ ಸೇವಿಸುವ ರೂಂ ಗೆ ಬಂದು ಇಬ್ಬರೂ ಒಂದೊಂದು ಪೆಗ್ ಸುರಿದುಕೊಂಡು ಕುಡಿಯುತ್ತಾ....ಸರ್, ಬಹುಶಃ ಇತ್ತೀಚಿನ ದಿನಗಳಲ್ಲಿ ಆಗಿರುವ ಅತಿ ದೊಡ್ಡ ಮೊತ್ತದ ದರೋಡೆ ಇದು ಅನಿಸುತ್ತದೆ ಅಲ್ಲವೇ.... ಐದು ಕೋಟಿ ಎಂದರೆ ಯಾರೋ ಬಹಳ ಸಮಯದಿಂದ ಪ್ಲಾನ್ ಮಾಡಿ ಈ ಮಾಡಿದ್ದಾರೆ. ಆದರೆ ಈ ದರೋಡೆಗೂ ಬಸ್ ಸ್ಫೋಟಕ್ಕೂ ಏನಾದರೂ ಸಂಬಂಧ ಇದೆ ಎಂದು ಅನಿಸುತ್ತಿದೆಯ ನಿಮಗೆ?

ಅದೇ ವಿಜಯ್ ನನಗೂ ಅರ್ಥ ಆಗುತ್ತಿಲ್ಲ ಬಸ್ ಸ್ಫೋಟ ಆಗಿ ನಾಲ್ಕೈದು ದಿನದ  ಆದ ಮೇಲೆ ದರೋಡೆ ಆಗಿದೆ.... ಹಾಗೊಂದು ವೇಳೆ ನಮ್ಮ ದಿಕ್ಕು  ಉದ್ದೇಶವೇ ಇದ್ದಿದ್ದರೆ ಎರಡೂ ಒಂದೇ ದಿನ ಆಗಬೇಕಿತ್ತು... ಎಲ್ಲಾ ಗೊಂದಲಮಯವಾಗಿದೆ... ಇರಲಿ ನಾಳೆ ಸ್ಪಾಟ್ ಗೆ ಹೋಗಿ ನೋಡೋಣ ಎಂದು ನಿರ್ಧರಿಸಿ ಮತ್ತೊಂದು ಪೆಗ್ ಸುರಿದುಕೊಂಡರು. 

Wednesday, June 17, 2015

ಬ್ಲಾಸ್ಟ್ - 1

ಹಲೋ...ಹಲೋ... ಕಂಟ್ರೋಲ್ ರೂಂ... ಈಗಷ್ಟೇ ಬೆಂಗಳೂರು ಕೋಲಾರ ಹೈವೇ ಮಧ್ಯದಲ್ಲಿ ಬಸ್ಸೊಂದು ಬ್ಲಾಸ್ಟ್ ಆಗಿದೆ. ಬ್ಲಾಸ್ಟ್ ತೀವ್ರತೆ ಎಷ್ಟಿತ್ತೆಂದರೆ ಎರಡು ಕಿಮೀ ವ್ಯಾಪ್ತಿಯವರೆಗೂ ಸ್ಫೋಟದ ಶಬ್ದ ಕೇಳಿದೆ. ಹೈವೇಯಲ್ಲಿ ಟ್ರಾಫಿಕ್ ಸಂಪೂರ್ಣ ಸ್ಥಗಿತಗೊಂಡಿದೆ. ಕೂಡಲೇ ಆಂಬುಲೆನ್ಸ್, ಫೈರ್ ಬ್ರಿಗೇಡ್ ಮತ್ತು ಒಂದಷ್ಟು ಪೋಲಿಸ್ ತುಕಡಿಗಳನ್ನು ಸ್ಥಳಕ್ಕೆ ಕಳುಹಿಸಿ...  

ಓವರ್...

ಮೆಸೇಜ್ ರಿಪೀಟ್...

ಈಗಷ್ಟೇ ಬೆಂಗಳೂರು ಕೋಲಾರ ಹೈವೇ ಮಧ್ಯದಲ್ಲಿ ಬಸ್ಸೊಂದು ಬ್ಲಾಸ್ಟ್ ಆಗಿದೆ. ಬ್ಲಾಸ್ಟ್ ತೀವ್ರತೆ ಎಷ್ಟಿತ್ತೆಂದರೆ ಎರಡು ಕಿಮೀ ವ್ಯಾಪ್ತಿಯವರೆಗೂ ಸ್ಫೋಟದ ಶಬ್ದ ಕೇಳಿದೆ. ಹೈವೇಯಲ್ಲಿ ಟ್ರಾಫಿಕ್ ಸಂಪೂರ್ಣ ಸ್ಥಗಿತಗೊಂಡಿದೆ. ಕೂಡಲೇ ಆಂಬುಲೆನ್ಸ್, ಫೈರ್ ಬ್ರಿಗೇಡ್ ಮತ್ತು ಒಂದಷ್ಟು ಪೋಲಿಸ್ ತುಕಡಿಗಳನ್ನು ಸ್ಥಳಕ್ಕೆ ಕಳುಹಿಸಿ... ಓವರ್...

ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ಪೋಲಿಸರಿಗೆ ಮತ್ತು ಆಂಬುಲೆನ್ಸ್ ನವರಿಗೆ ಸ್ಫೋಟದ ತೀವ್ರತೆ ಭಯ ಹುಟ್ಟಿಸಿತ್ತು... ಬಸ್ಸಿನ ಹೊರಾಂಗಣದ ಒಂಚೂರು ಅವಶೇಷ ಬಿಟ್ಟರೆ ಬೇರೇನೂ ಉಳಿದಿರಲಿಲ್ಲ... ಫೈರ್ ಬ್ರಿಗೇಡ್ ನವರಿಗೆ ಹೆಚ್ಚು ಕೆಲಸವಿರಲಿಲ್ಲ... ಸುತ್ತಲೂ ಬಯಲು ಪ್ರದೇಶವಾದ್ದರಿಂದ ಹೆಚ್ಚು ಆಸ್ತಿ ನಷ್ಟವಾಗಿರಲಿಲ್ಲ... ಆದರೆ... ಆದರೆ ಪ್ರಾಣ ಹಾನಿ?? ಎಷ್ಟು ಜನ ಪ್ರಯಾಣಿಕರಿದ್ದರು? ಎಷ್ಟು ಜನ ಸತ್ತಿದ್ದಾರೆ? ಸ್ಫೋಟದ ತೀವ್ರತೆಗೆ ಖಂಡಿತವಾಗಿ ಯಾರೂ ಉಳಿದಿರುವ ಸಾಧ್ಯತೆಯಂತೂ ಇಲ್ಲ... ಆದರೆ ಬಸ್ಸಿದ್ದ ಜಾಗದಲ್ಲಿ ಯಾವುದೇ ದೇಹ ಕಂಡು ಬರಲಿಲ್ಲ. ಸ್ಫೋಟದಲ್ಲಿ ಎಲ್ಲಾ ಚೂರು ಚೂರು ಆಗಿರಬಹುದೆಂದು ಸುತ್ತಲಿನ ಪ್ರದೇಶವನ್ನೆಲ್ಲ ಹುಡುಕಲು ಶುರುಮಾಡಿದರು.  ಕ್ರೇನ್ ಸಹಾಯದಿಂದ ಬಸ್ಸಿನ ಅವಶೇಷವನ್ನು ಪಕ್ಕಕ್ಕೆ ಎಳೆದುಹಾಕಿ ಸಂಚಾರಕ್ಕೆ ಮುಕ್ತಮಾಡಿಕೊಟ್ಟರು.

ಸುಮಾರು ನಾಲ್ಕು ಗಂಟೆ ಹುಡುಕಾಡಿದರೂ ಯಾವುದೇ ದೇಹದ ಸುಳಿವು ಪತ್ತೆಯಾಗಲಿಲ್ಲ. ಹಾಗಿದ್ದರೆ ಖಾಲಿ ಬಸ್ ಸ್ಫೋಟಗೊಂಡಿತೆ? ಯಾವುದೇ ಪ್ರತ್ಯಕ್ಷ ದರ್ಶಿಗಳಿಲ್ಲವೇ? ಸ್ಫೋಟಕ್ಕೆ ಕಾರಣವೇನು? ಹೀಗೆ ಹತ್ತು ಹಲವು ಪ್ರಶ್ನೆಗಳು ಕಾಡುತ್ತಿದ್ದರೂ ಯಾವುದೇ ಪ್ರಶ್ನೆಗಳಿಗೆ ನಿಖರವಾದ ಉತ್ತರ ಸಿಗಲಿಲ್ಲ. ಅಷ್ಟರಲ್ಲಿ ಸ್ಥಳಕ್ಕೆ ಆಗಮಿಸಿದ ವಿಶೇಷ ಅಧಿಕಾರಿ ಅಭಿಮನ್ಯು ಸುತ್ತಲಿನ ಸ್ಥಳವನ್ನು ಪರಿಶೀಲಿಸಿ ಮೊದಲು ಇದು ಯಾವ ಬಸ್ ಎಂದು ಪತ್ತೆ ಹಚ್ಚಿ... ಇದು ಸರ್ಕಾರಿ ಬಸ್ಸೋ ಅಥವಾ ಖಾಸಗಿ ಬಸ್ಸೋ..ಹಾಗೆಯೇ ಅಕ್ಕಪಕ್ಕದಲ್ಲಿ ಯಾವುದಾದರೂ ಬಸ್ ಡಿಪೋ ಇದೆಯಾ ಎಂದು ಪರಿಶೀಲಿಸಿ, ಹಾಗೆಯೇ ಕೋಲಾರದ ಈಚೆಗೆ ಯಾವುದಾದರೂ ಟೋಲ್ ಇದೆಯಾ ಎಂದು ಚೆಕ್ ಮಾಡಿ, ಒಂದು ವೇಳೆ ಇದ್ದರೆ ದಿವಸ ಬೆಳಿಗ್ಗೆಯಿಂದ ಯಾವ ಯಾವ ಬಸ್ ಬಂದಿದೆ ಎಂದು ಲಿಸ್ಟ್ ತೆಗೆದುಕೊಳ್ಳಿ ಹಾಗೆಯೇ ಕಡೆ ಇರುವ ಟೋಲ್ ನಲ್ಲಿ ಯಾವ ಯಾವ ಬಸ್ ಹೋಗಿದೆ ಎಂದು ಲಿಸ್ಟ್ ತೆಗೆದುಕೊಳ್ಳಿ....ಯಾವ ಬಸ್ ಮಿಸ್ ಆಗಿದೆಯೋ ಬಸ್ ಇದಾಗಿರುತ್ತದೆ. ಇವಿಷ್ಟು ದಾಖಲೆಗಳನ್ನು ಸಂಗ್ರಹಿಸಿದರೆ ಮುಂದಿನ ಕೆಲಸ ಸುಲಭ ಆಗುತ್ತದೆ ಎಂದು ಹೇಳಿ ಅಲ್ಲಿಂದ ಹೊರಟರು.

ಅಭಿಮನ್ಯು ಇಲಾಖೆಯಲ್ಲಿ ಬಹಳ ಪವರ್ಫುಲ್ ಆಫೀಸರ್ ಎಂದು ಹೆಸರು ಮಾಡಿದ್ದ ವ್ಯಕ್ತಿ. ಬಹಳ ಸಣ್ಣ ವಯಸಿನಲ್ಲೇ ಉನ್ನತ ಹುದ್ದೆ ಅಲಂಕರಿಸಿದ್ದ. ತನ್ನ ಚಾಣಾಕ್ಷತನದಿಂದ ಬಹಳಷ್ಟು ಜಟಿಲವಾದ ಕೇಸ್ಗಳನ್ನೂ ಲೀಲಾಜಾಲವಾಗಿ ಭೇದಿಸಿ ಕ್ರಿಮಿನಲ್ ಗಳಿಗೆ ಟೆರರ್ ಎನಿಸಿದ್ದ ವ್ಯಕ್ತಿ. ಇಂಥಹ ಅದೆಷ್ಟೋ ಕೇಸ್ ಗಳನ್ನು ಹ್ಯಾಂಡಲ್ ಮಾಡಿದ್ದ ಅಭಿಮನ್ಯುಗೆ ಇದೊಂದು ಸಾಧಾರಣ ಕೇಸ್ ಎನಿಸಿ ಹೆಚ್ಚು ತಲೆ ಕೆಡಿಸಿಕೊಳ್ಳದೆ ಯಾವುದೋ ಕೇಸ್ ಕಡಗತಳನ್ನು ಪರಿಶೀಲಿಸತೊಡಗಿದ. ಸ್ಫೋಟ ನಡೆದು ಎರಡು ದಿನಗಳ ನಂತರ ಅಭಿಮನ್ಯು ಕೇಳಿದ್ದ ಅಷ್ಟೂ ಮಾಹಿತಿ ಅಭಿಮನ್ಯು ಬಳಿ ಬಂದು ತಲುಪಿತು. ಮಾಹಿತಿಗಳನ್ನು ತಲುಪಿಸಿದ ಇನ್ಸ್ಪೆಕ್ಟರ್ ವಿಜಯ್ ಕುಮಾರ್ ಅಭಿಮನ್ಯುವನ್ನು ಕುರಿತು, ಸರ್ ನಾವಂದುಕೊಂಡಷ್ಟು ಸಾಧಾರಣ ಕೇಸ್ ಅಲ್ಲ ಅನಿಸುತ್ತಿದೆ ಇದು....ಇದು ಆಕಸ್ಮಿಕವಾಗಿ ಸಂಭವಿಸಿರೋ ಸ್ಫೋಟದಂತೆ ಕಾಣುತ್ತಿಲ್ಲ... ಬದಲಿಗೆ ಯಾರೋ ಬೇಕೆಂದೇ ಸ್ಫೋಟಿಸಿದ್ದಾರೆ ಎನಿಸುತ್ತಿದೆ. ಅಂದ ಹಾಗೆ ಬಸ್ ಬಂದು ಸರ್ಕಾರಿ ಬಸ್ಸೆಂದು ತಿಳಿದು ಬಂದಿದೆ. ಆದರೆ ಟೋಲ್ ನಲ್ಲಿ ಎಂಟ್ರಿಗೂ ಸ್ಫೋಟದ ದಿನಾಂಕಕ್ಕೂ ತಾಳೆ ಆಗುತ್ತಿಲ್ಲ...

ಅಭಿಮನ್ಯು ಓದುತ್ತಿದ್ದ ಕಡತವನ್ನು ಪಕ್ಕದಲ್ಲಿಟ್ಟು ವಿಜಯ್ ಹೇಳುತ್ತಿದ್ದ ವಿಷಯ ಕೇಳುವಂತೆ ಮಾಡಿತ್ತು ವಿಜಯ ಹೇಳಿದ ಕೊನೆಯ ಸಾಲು.... ಏನಂದ್ರಿ ವಿಜಯ್.... ಟೋಲ್ ಎಂಟ್ರಿಗೂ ಸ್ಫೋಟದ ದಿನಾಂಕಕ್ಕೂ ತಾಳೆ ಆಗುತ್ತಿಲ್ವ?

ಹೌದು ಸರ್, ಬಸ್ ಬೆಂಗಳೂರಿಂದ ಹೊರಟು ಹೊಸಕೋಟೆ ಬಳಿ ಟೋಲ್ ದಾಟಿರುವುದು ೨೧ನೆ ತಾರೀಖು ಮಧ್ಯಾಹ್ನ ಗಂಟೆಗೆ. ಮತ್ತೆ ಬಸ್ ಆ ಕಡೆ ಟೋಲ್ ದಾಟೇ ಇಲ್ಲ!! ಸ್ಫೋಟ ಸಂಭವಿಸಿರುವುದು ನೆನ್ನೆ ಅಂದರೆ ೨೪ನೆ ತಾರೀಖು ಸಂಜೆ ಏಳು ಗಂಟೆ ಸಮಯದಲ್ಲಿ. ಅಂದರೆ ಮೂರು ದಿವಸ ಆ ಬಸ್ ಆ ಮಧ್ಯದಲ್ಲೇ ಎಲ್ಲೋ ಉಳಿದಿದೆ. ಇವತ್ತು ನಮ್ಮ ತಂಡ ಆ ಸುತ್ತಮುತ್ತಲೂ ಯಾವುದಾದರೂ ದೇಹ ಸಿಗುತ್ತದೇನೋ ಎಂದು ಹುಡುಕಿದ್ದಾರೆ, ಆದರೆ ಯಾವುದೇ ಪ್ರಯೋಜನವಾಗಿಲ್ಲ.
ವಿಜಯ್ ಕುಮಾರ್ ೨೧ನೆ ತಾರೀಖು ಬಸ್ ಈ ಕಡೆ ಟೋಲ್ ದಾಟಿದೆ ಅಂದ್ರಲ್ಲ, ಅದು ಯಾವ ರೂಟ್ ಬಸ್ಸು ಮತ್ತು ಅದರಲ್ಲಿ ಪ್ರಯಾಣಿಕರು ಏನಾದರೂ ಇದ್ರಾ? ಡ್ರೈವರ್ ಎನಾದ? ಮತ್ತು ಈ ಮೂರು ದಿವಸ ಬಸ್ ಎಲ್ಲಿತ್ತು? ಇದೆಲ್ಲ ನೋಡ್ತಿದ್ರೆ.... ಈ ಸ್ಫೋಟದ ಹಿಂದೆ ಯಾವುದೋ ದೊಡ್ಡ ರಹಸ್ಯ ಇದ್ದ ಹಾಗಿದೆ... ಮೊದಲು ೨೧ನೇ ತಾರೀಖು ಬಸ್ ಡ್ರೈವ್ ಮಾಡಿಕೊಂಡು ಹೋಗಿದ್ದು ಯಾರು ಎಂದು ಕಂಡು ಹಿಡಿಯಬೇಕು... ಆಗ ನಮಗೆ ಮುಂದಿನ ಕೆಲಸ ಸುಲಭವಾಗುತ್ತದೆ. ಟೋಲ್ ನಲ್ಲಿ ದಾಖಲಾಗಿರುವ ಬಸ್ ನಂಬರನ್ನು ಇಲ್ಲಿ ಡಿಪೋನಲ್ಲಿ ಚೆಕ್ ಮಾಡಿ ಡ್ರೈವರ್ ಯಾರೆಂದು ತಿಳಿದುಕೊಳ್ಳಿ, ಮತ್ತು ಅವನನ್ನು ಕೂಡಲೇ ಬಂಧಿಸಿ ವಿಚಾರಣೆಗೆ ಕರೆದು ತನ್ನಿ.

ಒಂದು ದಿನದ ನಂತರ ಮತ್ತೆ ಬಂದ ವಿಜಯ್ ಕುಮಾರ್, ಸರ್... ಟೋಲ್ ನಲ್ಲಿ ರಿಜಿಸ್ಟರ್ ಆಗಿರುವ ನಂಬರ್ ಫೇಕ್ ಎಂದು ತನಿಖೆಯಲ್ಲಿ ತಿಳಿದು ಬಂದಿದೆ. ನಂಬರಿನ ಯಾವುದೇ ಬಸ್ ಇಲ್ಲ. ನಂತರ ಟೋಲ್  ನಲ್ಲಿನ CC ಕ್ಯಾಮೆರಾದಲ್ಲಿ ಚೆಕ್ ಮಾಡಿದಾಗ ಬಸ್ಸಲ್ಲಿ ಡ್ರೈವರ್ ಮತ್ತು ಇನ್ನೊಬ್ಬ ಬಿಟ್ಟರೆ ಬೇರ್ಯಾರೂ ಕಾಣುತ್ತಿಲ್ಲ. ಡ್ರೈವರ್ ಸಹ ಸರ್ಕಾರಿ ಬಸ್ ಡ್ರೈವರ್ ಅಲ್ಲ ಎಂದು ತಿಳಿದು ಬಂದಿದೆ. ಇದೆಲ್ಲಾ ನೋಡಿದರೆ ಬಹಳ ಗೊಂದಲಮಯವಾಗಿದೆ. ಒಂದೂ ತಿಳಿಯುತ್ತಿಲ್ಲ...
ಅಭಿಮನ್ಯು ಒಂದು ದೀರ್ಘ ನಿಟ್ಟುಸಿರು ಬಿಟ್ಟು, ಸ್ವಲ್ಪ ಹೊತ್ತು ಯೋಚಿಸಿ...ವಿಜಯ್ ಇದೇನೋ ಮಾಸ್ಟರ್ ಪ್ಲಾನ್ ಎನಿಸುತ್ತಿದೆ.... ಕೂಡಲೇ ಎರಡು ತಂಡ ತಯಾರು ಮಾಡುತ್ತೇನೆ, ಒಂದು ತಂಡವನ್ನು ನೀವು ಲೀಡ್ ಮಾಡಿ, ಇನ್ನೊಂದು ತಂಡವನ್ನು ನಾನು ಲೀಡ್ ಮಾಡುತ್ತೇನೆ. ನೀವು ಸಿಟಿಯಲ್ಲಿ ಯಾವುದಾದರೂ ಸ್ಟೇಷನ್ ನಲ್ಲಿ ಬಸ್ ಕಳುವಾಗಿದೆ ಎಂದು ಕಂಪ್ಲೇಂಟ್ ಬಂದಿದೆಯ ಎಂದು ಚೆಕ್ ಮಾಡಿ.... ನಾನು ಹೊಸಕೋಟೆ ಕೋಲಾರ್ ಮಧ್ಯದಲ್ಲಿ ಎಲ್ಲಾದರೂ ಕ್ಯಾಂಪ್ ಮಾಡಿ ಬಸ್ಸಿನ ಬಗ್ಗೆ ತನಿಖೆ ನಡೆಸುತ್ತೇನೆ. ಹಾಗೆ ಡ್ರೈವರ್ ಫೋಟೋ ಎಲ್ಲಾ ಸ್ಟೇಷನ್ ಗೆ ಫ್ಯಾಕ್ಸ್ ಮಾಡಿ ಪತ್ತೆ ಆದರೆ ಕೂಡಲೇ ಮೆಸೇಜ್ ಮಾಡಿ.. Ok...

ವಿಜಯ್ ಅಂದ ಹಾಗೇ, ಒಮ್ಮೆ ಇಂಟೆಲಿಜೆನ್ಸ್ ಅವರನ್ನೂ ಸಂಪರ್ಕಿಸಿ ನೋಡಿ, ಯಾವುದಾದರೂ ಟೆರರಿಸ್ಟ್ ಸಂಘಟನೆ ಇಂದ ಯಾವುದಾದರೂ ಬೆದರಿಕೆ ಬಂದಿದೆಯ ಎಂದು... ಏಕೆಂದರೆ ಇತ್ತೀಚಿಗೆ ಅದೊಂದು ತಲೆನೋವು ಬೇರೆ ಶುರುವಾಗಿದೆಯಲ್ಲ...ಆದರೆ ಅವರು ಬಸ್ ಸ್ಫೋಟಗೊಂಡಿರುವ ಸ್ಥಳ ನೋಡಿದರೆ ಹಾಗೆ ಆಗಿರುವುದು ಅನುಮಾನ. ಯಾವುದಕ್ಕೂ ಒಂದು ಸಲ ಖಚಿತಪಡಿಸಿಕೊಳ್ಳೋಣ... ಸರಿ ನೀವಿನ್ನು ಹೊರಡಿ... ಆದಷ್ಟು ಬೇಗ ಇದನ್ನು ಬಗೆಹರಿಸಬೇಕು. ಆಗಲೇ ನೆನ್ನೆ ಹೋಂ ಮಿನಿಸ್ಟರ್ ಕರೆ ಮಾಡಿ ಒಂದು ವಾರದ ಒಳಗೆ ರಿಪೋರ್ಟ್ ಬೇಕು ಎಂದು ಹೇಳಿದ್ದಾರೆ.

ಅಯ್ಯೋ ಬಿಡಿ ಸರ್... ಅವರಿಗೇನು ಹೇಳಿ ಬಿಡುತ್ತಾರೆ... ನಮ್ಮ ಕಷ್ಟ ಅವರಿಗೇನು ಗೊತ್ತು...

ಅದು ಸರಿ ವಿಜಯ್... ಏನು ಮಾಡುವುದು... ನಮ್ಮ ಕೆಲಸ ನಾವು ಮಾಡಲೇಬೇಕಲ್ಲವೇ...

Tuesday, September 23, 2014

ವಲಸೆ


ಚಿಕ್ಕಂದಿನಲ್ಲಿ ಬಡತನದ ಬೇಗುದಿಯನ್ನು ತಾಳಲಾಗದೆ ರಾತ್ರೋ ರಾತ್ರಿ ಹಳ್ಳಿ ಬಿಟ್ಟು ಪಟ್ಟಣ ಸೇರಿ ಅದೂ ಇದೂ ಕೆಲಸ ಮಾಡಿ ಸ್ವಲ್ಪ ಮಟ್ಟಿಗೆ ಹಣ ಸಂಪಾದಿಸಿ ೧೫ ವರ್ಷಗಳ ನಂತರ ಹಳ್ಳಿಯ ನೆನಪಾಗಿ, ಮತ್ತೆ ತನ್ನ ಹಳ್ಳಿಯನ್ನು ತನ್ನವರನ್ನು ನೋಡಲು ಹಳ್ಳಿಗೆ ವಾಪಸಾಗುತ್ತಿದ್ದ ಮುನಿಯನ ಮನಸಿನಲ್ಲಿ ನೂರಾರು ಯೋಚನೆಗಳು ಓಡುತ್ತಿದ್ದವು. ಬಸ್ಸಿನ ಕಿಟಕಿಗೆ ತಲೆ ಆನಿಸಿಕೊಂಡು ಬಸ್ಸನ್ನು ಹಿಂದಿಕ್ಕಿ ಸಾಗುತ್ತಿದ್ದ ಮರಗಳು, ಬೆಟ್ಟಗಳು ಮುನಿಯನ ನೆನಪುಗಳು ಹಿಂದಕ್ಕೆ ಓದುವಂತೆ ಮಾಡಿದ್ದವು.

ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಮಾರಂಡಹಳ್ಳಿ ಎಂಬ ಸಣ್ಣ ಗ್ರಾಮದಲ್ಲಿ ನೆಲೆಸಿದ್ದ ಮುನಿಯನ ಕುಟುಂಬ ತೀರಾ ಕಡು ಬಡವರ ಅಲ್ಲದಿದ್ದರೂ ಶ್ರೀಮಂತರಂತೂ ಆಗಿರಲಿಲ್ಲ. ಮುನಿಯನ ತಂದೆ ಊರಿನ ಶಾನುಭೋಗರ ಹೊಲದಲ್ಲಿ ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದ. ಅವತ್ತು ದುಡಿದದ್ದು ಅವತ್ತಿಗೆ ಸರಿಹೋಗುತ್ತಿತ್ತು. ಸಣ್ಣ ವಯಸಿನ ಮುನಿಯನಿಗೆ ಇದೆಲ್ಲ ತಿಳಿಯುತ್ತಿರಲಿಲ್ಲ, ಕಾಲ ಕಳೆದು ಮುನಿಯನಿಗೆ ಬುದ್ಧಿ ಬೆಳೆಯುತ್ತಿದ್ದಂತೆ ಊರಿನ ಪರಿಸ್ಥಿತಿಯೂ ಬದಲಾಗುತ್ತಿತ್ತು.

ಕಾಲಕ್ಕೆ ತಕ್ಕಂತೆ ಮಳೆಯಾಗದ ಕಾರಣ ಕೆರೆಗಳಲ್ಲಿ ನೀರು ಕಡಿಮೆಯಾಗತೊಡಗಿತು, ಯಾವಾಗ ಕೆರೆಗಳಲ್ಲಿ ನೀರು ಕಡಿಮೆಯಾಗತೊಡಗಿತೋ ಸಮೃದ್ಧವಾಗಿ ಬೆಳೆಯುತ್ತಿದ್ದ ಹೊಲಗದ್ದೆಗಳು ಬರಡಾಗುತ್ತಾ ಹೋದವು. ಬೋರ್ ವೆಲ್ ಗಳು ಇದ್ದ ಹೊಲಗದ್ದೆಗಳಲ್ಲಿ ಮಾತ್ರ ಬೆಳೆ ಬೆಳೆಯುವ ಪರಿಸ್ಥಿತಿ ಸೃಷ್ಟಿಯಾಗಿತ್ತು. ಆಗ ಮುನಿಯನಿಗೆ ಹದಿನೆಂಟು ವರ್ಷ, ಹತ್ತನೇ ತರಗತಿ ಮುಗಿಸಿ ಮುಂದೆ ಓದಲು ಆರ್ಥಿಕ ಪರಿಸ್ಥಿತಿ ಆಗದ್ದರಿಂದ ಅಪ್ಪನ ಜೊತೆ ತಾನೂ ಸಹ ಕೂಲಿ ಮಾಡಲು ಹೋಗುತ್ತಿದ್ದ... ದಿನೇ ದಿನೇ ಬದಲಾಗುತ್ತಿದ್ದ ಪರಿಸ್ಥಿತಿಯನ್ನು ನೋಡಿದ ಮುನಿಯ ಇಲ್ಲೇ ಇದ್ದರೆ ಊಟ ಇಲ್ಲದೆ ಸಾಯಬೇಕಾಗುತ್ತದೆ, ಪಟ್ಟಣಕ್ಕೆ ಹೋಗಿ ಏನಾದರೂ ಸಂಪಾದಿಸಿ ಮತ್ತೆ ವಾಪಸ್ ಹಳ್ಳಿಗೆ ಬರುವ ಎಂದು ನಿರ್ಧರಿಸಿದವನೇ ರಾತ್ರೋ ರಾತ್ರಿ ಬಸ್ ಹತ್ತಿ ಬೆಂಗಳೂರಿಗೆ ಬಂದು ಬಿಟ್ಟನು. 

ಬೆಂಗಳೂರಿಗೆ ಬಂದವನು ಮೊದಮೊದಲು ಸಣ್ಣಪುಟ್ಟ ಕೆಲಸಗಳನ್ನು ಮಾಡುತ್ತಾ ಹಾಗೆಯೇ ಒಂದು ಫ್ಯಾಕ್ಟರಿಯಲ್ಲಿ ಕೆಲಸ ಸಂಪಾದಿಸಿ, ಹತ್ತು ವರ್ಷ ಕೆಲಸ ಮಾಡಿ ತಕ್ಕ ಮಟ್ಟಿಗೆ ಸಂಪಾದಿಸಿದ ಮೇಲೆ ಇದ್ದಕ್ಕಿದ್ದ ಹಾಗೆ ಊರಿನ ನೆನಪಾಗಿ ಒಮ್ಮೆಯಾದರೂ ಹೋಗಿ ಅಪ್ಪ ಅಮ್ಮನನ್ನು ನೋಡಿ ಅವರು ಒಪ್ಪಿದರೆ ಅವರನ್ನೂ ತನ್ನೊಡನೆ ಬೆಂಗಳೂರಿಗೆ ಕರೆದುಕೊಂಡು ಬರಬೇಕೆಂದುಕೊಂಡು ಊರಿನ ಕಡೆ ಹೊರಟಿದ್ದನು.

ತಾನು ಊರು ಬಿಟ್ಟು ಹದಿನೈದು ವರ್ಷಗಳಾಗಿದ್ದವು, ಸಾಕಷ್ಟು ಬದಲಾವಣೆಗಳು ಆಗಿರುತ್ತವೆ, ಊರಿನವರಿಗೆ ನನ್ನ ಗುರುತು ಸಿಗುವುದೋ ಇಲ್ಲವೋ ಎಂದುಕೊಂಡು ಮುಳಬಾಗಿಲಿನಲ್ಲಿ ಇಳಿದನು. ತನ್ನ ಕಣ್ಣನ್ನು ತಾನೇ ನಂಬಲಾದನು. ತಾನು ಹೊರಟಾಗ ಹೇಗಿತ್ತೋ ಈಗಲೂ ಹಾಗೆ ಇತ್ತು ಮುಳಬಾಗಿಲು. ಒಂದೆರೆಡು ಸಣ್ಣ ಪುಟ್ಟ ಬದಲಾವಣೆ ಬಿಟ್ಟರೆ ಹೆಚ್ಚು ವ್ಯತ್ಯಾಸ ಕಾಣಲಿಲ್ಲ. ಅದೇ ಬೆಂಗಳೂರಲ್ಲಿ ಆಗಿದ್ದರೆ ಹದಿನೈದು ದಿನ ಬಿಟ್ಟು ಹೋದರೇನೆ ಸಿಕ್ಕಾಪಟ್ಟೆ ಬದಲಾಗಿ ಬಿಟ್ಟಿರುತ್ತದೆ ಎಂದುಕೊಂಡು ಆಟೋ ಹತ್ತಿ ಹಳ್ಳಿಯ ಕಡೆ ಹೊರಟನು. ಅಲ್ಲಿಂದ ತನ್ನ ಹಳ್ಳಿಗೆ ಆರು ಕಿಲೋಮೀಟರ್... ಮುಂಚೆಯಾದರೆ ನಡೆದುಕೊಂಡು ಹೋಗುತ್ತಿದ್ದದ್ದು ನೆನಪು,ಇಲ್ಲವಾದರೆ ಎತ್ತಿನ ಬಂಡಿಗಳಲ್ಲಿ ಅಥವಾ ಯಾವುದಾದರೂ ಸೈಕಲ್ ನಲ್ಲಿ ಹೋಗುತ್ತಿದ್ದದ್ದು.... ಈಗ ಆಟೋಗಳು ಆ ಜಾಗವನ್ನು ಆಕ್ರಮಿಸಿದ್ದವು..

ಊರು ಹೆಚ್ಚು ಬದಲಾಗಿಲ್ಲದಿದ್ದರೂ ಪ್ರಾಕೃತಿಕವಾಗಿ ಬಹಳಷ್ಟು ಬದಲಾವಣೆಗಳು ಆಗಿದ್ದವು, ಮುಂಚೆ ರಸ್ತೆಯ ಅಕ್ಕಪಕ್ಕಗಳಲ್ಲಿ ಇದ್ದ ಬೃಹದಾಕಾರದ ಸಾಲುಮರಗಳು ರಸ್ತೆ ಅಗಲೀಕರಣದ ನೆಪದಲ್ಲಿ ನೆಲ ಕಚ್ಚಿದ್ದವು, ಅಲ್ಲಿ ಮರಗಳಿದ್ದವು ಎಂದೇ ಹೇಳಲು ಆಗುತ್ತಿರಲಿಲ್ಲ, ಕೆರೆಗಳು ಬತ್ತಿ  ವರ್ಷಗಳಾದಂತೆ ತೋರುತ್ತಿದ್ದವು. ಮುಂಚೆ ಹೆದ್ದಾರಿಯಿಂದ ಹಳ್ಳಿಗೆ ಕವಲೊಡೆಯುವ ದಾರಿಯಲ್ಲಿ ಮಾರಂಡಹಳ್ಳಿ ಬೋರ್ಡಿಗೆ ಹುಡುಕಾಡುತ್ತಿದ್ದ. ಅಷ್ಟರಲ್ಲಿ ಆಟೋದವನು ರಸ್ತೆಯನ್ನು ಬಿಟ್ಟು ಪಕ್ಕಕ್ಕೆ ತಿರುಗಿಸಿದನು. ಕೂಡಲೇ ಏನಪ್ಪಾ ಇಲ್ಲಿ ಯಾಕೆ ತಿರುಗಿಸಿದೆ ನಾನು ಮಾರಂಡಹಳ್ಳಿಗೆ ಹೋಗಬೇಕು ಎಂದಿದ್ದಕ್ಕೆ ಸ್ವಾಮಿ ಇದೇ ಮಾರಂಡಹಳ್ಳಿ ರಸ್ತೆ ಎಂದನು.

ಇಲ್ಲಿ ಬೋರ್ಡ್ ಇತ್ತಲ್ಲ ಏನಾಯ್ತು.... ಹೋ ಸ್ವಾಮಿ ನೀವು ಈ ಕಡೆ ಬಂದು ಎಷ್ಟು ವರ್ಷ ಆಯ್ತು? ಆ ಬೋರ್ಡ್ ಹೋಗಿ ಐದು ವರ್ಷದ ಮೇಲಾಯ್ತು, ರಸ್ತೆ ಅಗಲೀಕರಣದ ಸಮಯದಲ್ಲಿ ತೆಗೆದದ್ದು ಮತ್ತೆ ಹಾಕಲೇ ಇಲ್ಲ ಎಂದ. ಸರಿ ನಡಿಯಪ್ಪ ಎಂದುಕೊಂಡು ಹಳ್ಳಿ ದಾರಿಯನ್ನು ನೋಡೋಣ ಎಂದುಕೊಂಡು ಸುತ್ತಲೂ ನೋಡುತ್ತಿದ್ದ. ಒಂದು ಕಾಲದಲ್ಲಿ ಹಳ್ಳಿ ದಾರಿಯ ಇಕ್ಕೆಲಗಳಲ್ಲಿ ಸಮೃದ್ಧವಾಗಿ ಬೆಳೆಯುತ್ತಿದ್ದ ಭತ್ತದ ಗದ್ದೆಗಳು, ಗದ್ದೆಗಳು, ಕಡಲೇಕಾಯಿ ಹೊಲಗಳು, ತರಕಾರಿ ಬೆಳೆಯುತ್ತಿದ್ದ ಹೊಲಗಳಿದ್ದ ಜಾಗಗಳೆಲ್ಲ  ಬರಡಾಗಿ ಆ ಜಾಗದಲ್ಲಿ ಈಗ ನೀಲಗಿರಿ ಬಂದಿದ್ದವು. ಒಮ್ಮೆ ನೀಲಗಿರಿ ಬಂತೆಂದರೆ ಮತ್ತೆ ಆ ಭೂಮಿ ಇನ್ಯಾವುದಕ್ಕೂ ಪ್ರಯೋಜನವಿಲ್ಲ ಎಂದರ್ಥ. ಹಾಗೆ ಮುಂದೆ ಬಂದರೆ ಇಡೀ ಹಳ್ಳಿಗೆ ನೀರು ಒದಗಿಸುತ್ತಿದ್ದ ಅಡವಿ ಕೆರೆ ಬಿರುಕು ಬಿಟ್ಟುಕೊಂಡು ಒಣಗಿ ಹೋಗಿತ್ತು. ಅಲ್ಲಿಯೂ ೨೦ - ೩೦ ಬೋರ್ವೆಲ್ ಗಳನ್ನು ಹಾಕಿದ್ದರು.

ಛೇ ಹೇಗಿದ್ದ ಹಳ್ಳಿ ಹೇಗಾಗಿ ಹೋಯಿತು ಎಂದು ಮನಸು ಮರುಗುತ್ತಿತ್ತು. ಹಾಗೆಯೇ ಮುಂದೆ ಬಂದಾಗ ಆಟೋ ನಿಂತಿತು. ಕೆಳಗಿಳಿದು ಆಟೋದವನಿಗೆ ದುಡ್ಡು ಕೊಟ್ಟು ಒಮ್ಮೆ ಸುತ್ತಲೂ ನೋಡಿದ. ಸದಾಕಾಲ ಯಾರಾದರೊಬ್ಬರು ಗುಂಪು ಕಟ್ಟಿಕೊಂಡು ಹರಟೆ ಹೊಡೆಯುತ್ತಿದ್ದ ಸರ್ಕಾರಿ ಶಾಲೆಯ ಕಟ್ಟೆ ಹಾಗೆಯೇ ಇತ್ತು..ಆದರೆ ಯಾರೊಬ್ಬರೂ ಕಾಣಲಿಲ್ಲ. ಹಾಗೆ ಊರದಾರಿಯಲ್ಲಿ ಮುಂದಕ್ಕೆ ಸಾಗಿದರೆ ಊರ ಮುಂದೆಯೇ ಇದ್ದ ಪಟೇಲರ ಮನೆ ಬೇಗ ಜಡಿದಿತ್ತು, ಮುಂದೆ ಬಂದರೆ ಗುಂಡಪ್ಪನವರ ಮನೆ ಶಿಥಿಲಗೊಂಡು ಯಾರೂ ಕಾಣಲಿಲ್ಲ, ಎಲ್ಲಿಯೂ ಯಾರೂ ಕಾಣುತ್ತಿಲ್ಲ, ಪರಿಚಯಸ್ಥರ ಮನೆಗಳಿಗೆ ಬೀಗ ಜಡಿದಿತ್ತು, ಮನೆ... ನಾನಿದ್ದ ಮನೆ ಹತ್ತಿರವಾಗುತ್ತಿದ್ದಂತೆ... ಎದೆ ಬಡಿತ ಜೋರಾಯಿತು, ಅಪ್ಪ ಅಮ್ಮ ತನ್ನನ್ನು ನೋಡಿ ಹೇಗೆ ಪ್ರತಿಕ್ರಿಯಿಸುತ್ತಾರೋ, ಹೇಗೆ ಸ್ವೀಕರಿಸುತ್ತಾರೋ, ತನ್ನನ್ನು ನೋಡಿ ಸಂತೋಷ ಪಡುತ್ತಾರೋ, ಬಿಟ್ಟು ಹೋದೆ ಎಂದು ಕೋಪಿಸಿಕೊಳ್ಳುತ್ತಾರೋ ಎಂದು ದುಗುಡದಿಂದಲೇ ತಾವಿದ್ದ ಮನೆ ಬಳಿ ಬಂದರೆ ಒಂದು ಕ್ಷಣ ದುಃಖ ಉಮ್ಮಳಿಸಿ ಬಂತು... ಮನೆಯ ಬಾಗಿಲು ಗೋಡೆಗಳೆಲ್ಲ ಶಿಥಿಲವಾಗಿ ಯಾವಾಗ ಬೇಕಾದರೂ ಬೀಳುವ ಹಾಗಿತ್ತು.

ಅಲ್ಲಿಂದಲೇ ಅಮ್ಮ ಎಂದು ಕೂಗಿದ.... ಯಾವುದೇ ಉತ್ತರ ಬರಲಿಲ್ಲ, ಅಪ್ಪ ಎಂದು ಕರೆದ.... ಇಲ್ಲ, ಯಾವುದೇ ಉತ್ತರ ಇಲ್ಲ... ಗಂಟಲು ಉಬ್ಬಿ ಧ್ವನಿ ಆಚೆ ಬರದಂತಾಯಿತು, ಕಣ್ಣಂಚಿನಿಂದ ಬಂದ ನೀರನ್ನು ಒರೆಸಿಕೊಂಡು ಮತ್ತೊಮ್ಮೆ ಗಟ್ಟಿಯಾಗಿ ಅಮ್ಮ ಎಂದು ಕೂಗಿದ, ಇಲ್ಲ ಯಾವುದೇ ಉತ್ತರ ಇಲ್ಲ.... ಅಪ್ಪ ಎಂದಾಗ ಒಳಗಿನಿಂದ ಯಾರದು... ಎಂಬ ಕೀರಲು ಧ್ವನಿಯಿಂದ ಪೂರ ಕೃಶವಾಗಿ ಬೆನ್ನು ಬಾಗಿ ಕೈಯಲ್ಲಿ ಒಂದು ಊರುಗೋಲನ್ನು ಹಿಡಿದುಕೊಂಡು ಒಬ್ಬ ಅಜ್ಜ ಆಚೆ ಬಂದರು.... ಒಳಗೆ ಸರಿಯಾಗಿ ಬೆಳಕಿರದಿದ್ದರಿಂದ ಸರಿಯಾಗಿ ತಿಳಿಯಲಿಲ್ಲ.... ಪೂರ್ಣ ಬೆಳಕು ಬಿದ್ದಾಗ ಕಾಲಡಿಯ ಭೂಮಿ ಒಮ್ಮೆಲೇ ಕುಸಿದಂತಾಗಿ ಕಾಲಲ್ಲಿದ್ದ ಶಕ್ತಿಯೆಲ್ಲ ಉಡುಗಿ ಹಾಗೇ ಕುಸಿದು ಬಿದ್ದ.... ಅಲ್ಲಿ ಬಂದಿದ್ದ ವ್ಯಕ್ತಿ ಬೇರ್ಯಾರೂ ಆಗಿರದೆ ತನ್ನ ಅಪ್ಪನೇ ಆಗಿದ್ದರು....

ಯಾರದೂ ಎಂದು ತನ್ನ ಕನ್ನಡಕವನ್ನು ಸರಿಮಾಡಿಕೊಂಡು ತನ್ನ ಬಳಿ ಬಂದವರೇ... ತನ್ನನ್ನು ಹತ್ತಿರದಿಂದ ನೋಡಿ.... ನೀನು.... ನೀನು... ಮು.. ಮು.. ನಿ...

ಧಪ್ ಎಂದು ದೇಹ ನೆಲಕ್ಕೆ ಉರುಳಿತು...

ಮುನಿಯನಿಗೆ ಏನಾಯಿತು ಎಂದು ಅರಿವಾಗಲಿಲ್ಲ.... ಅಪ್ಪ... ಅಪ್ಪ ಎಂದು ಕೂಗುತ್ತಿದ್ದರೂ ಯಾವುದೇ ಪ್ರತಿಕ್ರಿಯೆ ಬರಲಿಲ್ಲ.... ಅಷ್ಟರಲ್ಲಿ ಅಲ್ಲಿಗೆ ಒಂದಿಬ್ಬರು ಯುವಕರು ಬಂದು ಕೆಳಗಿ ಬಿದ್ದಿದ್ದ ಮುನಿಯನ ತಂದೆಯನ್ನು ಸಿದ್ದಣ್ಣ.... ಸಿದ್ದಣ್ಣ ಎಂದು ಎಬ್ಬಿಸಿ ಗೋಡೆಗೆ ಒರಗಿಸಿ, ಒಬ್ಬ ಮನೆಯ ಒಳಗೆ ಹೋಗಿ ಒಂದು ತಂಬಿಗೆಯಲ್ಲಿ ನೀರನ್ನು ತಂದು ಅಪ್ಪನಿಗೆ ಕುಡಿಸಲು ಪ್ರಯತ್ನಿಸಿದ.... ಆದರೆ ಅಷ್ಟರಲ್ಲೇ ಅಪ್ಪನ ಪ್ರಾಣ ಗಾಳಿಯಲ್ಲಿ ಲೀನವಾಗಿ ಹೋಗಿತ್ತು....

ಇನ್ನೊಬ್ಬ ಯುವಕ ಮುನಿಯನನ್ನು ನೋಡಿ, ನೀನು ಮುನಿಯ ಅಲ್ಲವೇ..... ಲೇ ಮುನಿಯ ನಾನ್ ಕಣ್ಲ.... ಸುಕುಮಾರ.... ಲೇ.... ನಿಮ್ಮಪ್ಪ ನಿನ್ನನ್ನು ನೋಡಕ್ಕೊಸ್ಕರ ಹತ್ತು ವರ್ಷದಿಂದ ಜೀವ ಕೈಯಲ್ಲಿ ಹಿಡಿದುಕೊಂಡು ಮಗ ಇವತ್ತು ಬರ್ತಾನೆ, ನಾಳೆ ಬರ್ತಾನೆ ಅಂತ ಕೂತಿದ್ದ ಕಣ್ಲ.... ನೋಡ್ಲಾ ವಿಧಿ ಅನ್ನೋದು ಇದಕ್ಕೇ ಕಣ್ಲ.... ನಿನ್ನನ್ನು ನೋಡೇ ಪ್ರಾಣ ಬಿಟ್ಟ...

ಅವನ ಮಾತುಗಳನ್ನು ಕೇಳಿ ಹೃದಯ ವಿದ್ರಾವಕವಾಗಿ ಅಳಬೇಕೆಂದರೂ ಅದ್ಯಾಕೋ ಗೊತ್ತಿಲ್ಲ, ಕಣ್ಣಲ್ಲಿ ನೀರು ಬರುತ್ತಿಲ್ಲ... ಹಾಗೆಯೇ ಎದ್ದು ಒಳಗೆ ಹೋದ.... ಅಮ್ಮಾ .... ಅಮ್ಮಾ ಎಂದು ಜೋರಾಗಿ ಕಿರುಚಿಕೊಂಡು ಮನೆಯೆಲ್ಲಾ ಹುಡುಕಿದ.... ಏನೂ ಪ್ರಯೋಜನವಾಗಲಿಲ್ಲ... ಆಚೆ ಬಂದು ಸುಕುಮಾರನನ್ನು ಅಮ್ಮಾ ಎಲ್ಲೋ ಎಂದ.... ಅಮ್ಮ ತೀರಿಹೋಗಿ ಅದಾಗಲೇ ಹತ್ತು ವರ್ಷ ಕಳೆಯಿತು ಎಂದು ಅವನ ಮಾತು ಪೂರ್ತಿಯಾಗುವಷ್ಟರಲ್ಲಿ ಕಣ್ಣು ಕತ್ತಲಾದಂತಾಗಿ ಬಿದ್ದುಬಿಟ್ಟ.... ಮತ್ತೆ ಕಣ್ಣು ಬಿಟ್ಟಾಗ ಅಲ್ಲೇ ಜಗಲಿಯ ಮೇಲೆ ಕುಳಿತಿದ್ದ...

ಅಪ್ಪನ ಕಾರ್ಯವನ್ನು ಮುಗಿಸಿ ಬಂದು ಮನೆಯ ಕಟ್ಟೆಯ ಮೇಲೆ ಕುಳಿತು ಸುಕುಮಾರನ ಕಡೆ ನೋಡಿದಾಗ, ಮುನಿಯ ನೀನು ಮನೆ ಬಿಟ್ಟು ಹೋದಾಗಿನಿಂದ ನಿಮ್ಮಪ್ಪ ಅಮ್ಮ ನಿನ್ನನ್ನು ಹುಡುಕಲು ಮಾಡದ ಪ್ರಯತ್ನವಿಲ್ಲ... ಏನೇ ಮಾಡಿದರೂ ನೀನು ದೊರೆಯದಿದ್ದಾಗ ಅದೇ ಕೊರಗಿನಲ್ಲಿ ನಿಮ್ಮಮ್ಮ ಹಾಸಿಗೆ ಹಿಡಿದಳು, ಅವಳಿಗೆ ಔಷಧಿ ಕೊಡಿಸಲು ಸಹ ನಿಮ್ಮಪ್ಪನ ಬಳಿ ದುಡ್ಡಿರಲಿಲ್ಲ, ಅದೇ ಸಮಯಕ್ಕೆ ಭೀಕರ ಬರ ಬಂದು ಅದೇ ಬರಗಾಲದಲ್ಲಿ ನಿಮ್ಮಮ್ಮ ಕೊನೆ ಉಸಿರೆಳೆದಳು. ಅವಳು ಹೋದ ಮೇಲೆ ನಿಮ್ಮಪ್ಪ ಒಂಟಿಯಾಗಿಬಿಟ್ಟ... ಅವಾಗ ಇವಾಗ ಯಾರಾದರೂ ಏನಾದರೂ ಕೊಟ್ಟರೆ ತಿನ್ನುತ್ತಿದ್ದ, ಇಲ್ಲವಾದರೆ ಹಾಗೇ ಇದ್ದು ಬಿಡುತ್ತಿದ್ದ... ಯಾರಾದರೂ ಕರೆದರೆ ಹೋಗಿ ಕೂಲಿ ಮಾಡುತ್ತಿದ್ದ ಇಲ್ಲವಾದರೆ ಸುಮ್ಮನಾಗಿ ಬಿಡುತ್ತಿದ್ದ.... ನಿನ್ನ ಬಗ್ಗೆ ಯಾರಾದರೂ ಬೈದರೆ ಅವರಿಗೆ ಹೊಡೆದೇ ಬಿಡುತ್ತಿದ್ದ... ಎಂದಾದರೂ ಒಂದು ದಿನ ಬಂದೇ ಬರುತ್ತಾನೆ, ಅವನು ಬರುವ ತನಕ ನಾನು ಸಾಯುವುದಿಲ್ಲ ಎನ್ನುತ್ತಿದ್ದ.... ಇವತ್ತು ನೋಡು ನಿನ್ನನ್ನು ನೋಡಿಯೇ ಪ್ರಾಣ ಬಿಟ್ಟ ಎಂದು ನಿಟ್ಟುಸಿರು ಬಿಟ್ಟ...