Monday, August 11, 2014

ಬರೆದೆ ನೀನು ನಿನ್ನ ಹೆಸರ - ಭಾಗ ೪



ರಾಧಾ ಏಕೆ ಪವನ್ ಗೆ ಹೀಗೆ ಮಾಡಿದಳು... ಅದೂ ಹೆಚ್ಚು ಕಡಿಮೆ ಒಂದು ವರ್ಷ ಪ್ರೀತಿಸಿ ಹೀಗೆ ಮಾಡಿದ್ದಾಳೆ ಎಂದರೆ ಏನೋ ಬಲವಾದ ಕಾರಣವೇ ಇರಬೇಕು. ಆದರೂ ಅವಳು ಬೇರೆ ಯಾರನ್ನಾದರೂ ಆಗಿದ್ದರೆ ಅದೊಂದು ರೀತಿ... ಆದರೆ ಜೊತೆಯಲ್ಲೇ ಇದ್ದ ಕುಮಾರ್ ನನ್ನು.... ಇದೆ ಅರ್ಥವಾಗುತ್ತಿಲ್ಲ... ಹ್ಮ್ ... ಇರಲಿ ಎಂದು ಮತ್ತೆ ಪುಸ್ತಕ ಕೈಗೆತ್ತುಕೊಂಡು ಶುರುಮಾಡಿದೆ.
ರಾಧಾ ಕೊಟ್ಟ ಶಾಕ್ನಿಂದ ಸುಧಾರಿಸಿಕೊಳ್ಳಲು ಸಾಧ್ಯವೇ ಆಗಲಿಲ್ಲ. ಹಾಗೆಂದು ಸುಮ್ಮನೆ ಕೂಡುವ ಹಾಗಿಲ್ಲ... ಒಂದು ಕಡೆ ಟೀಂ ಲೀಡ್ ಎಂಬ ಜವಾಬ್ದಾರಿ ತಲೆಯ ಮೇಲೆ ಕುಳಿತಿದೆ.. ಸಂದರ್ಭದಲ್ಲಿ ಇಂಥಹ ಶಾಕ್.. ನೇರ ಗೀತಾ ಕೋಣೆಗೆ ಹೋಗಿ... ಗೀತಾ ಅರ್ಜೆಂಟಾಗಿ ಊರಿಗೆ ಹೋಗಬೇಕಿದೆ ಒಂದು ವಾರ ರಜೆ ಬೇಕೆಂದೆ. ಏನು ಆಶ್ಚರ್ಯವೋ ಗೊತ್ತಿಲ್ಲ ಗೀತಾ ಮರು ಮಾತಾಡದೆ ಒಪ್ಪಿಗೆ ಕೊಟ್ಟು ಬಿಟ್ಟಳು.

ಪವನ್ ಈಗ ಓಕೆ... ಆದರೆ ವಾಪಸ್ ಬಂದ ಮೇಲೆ ಮತ್ತೆ ಯಾವುದೇ ರಜೆ ಹಾಕುವ ಹಾಗಿಲ್ಲ ಎಂದು ಎಚ್ಚರ ಕೊಟ್ಟು ಕಳಿಸಿದಳು. ಸರಿ ಎಂದು ಹೇಳಿ ಸೀದಾ ಊರಿನ ಬಸ್ಸು ಹತ್ತಿಬಿಟ್ಟೆ. ಊರಿಗೆ ಬಂದು ಮನೆಯವರ ಜೊತೆ, ಸ್ನೇಹಿತರ ಜೊತೆ, ಪ್ರಕೃತಿಯ ಜೊತೆ ಬೆರೆತು ರಾಧಾಳನ್ನು ಮರೆಯಲು ಪ್ರಯತ್ನಿಸಿದರೂ ಆಗಲಿಲ್ಲ. ಅವಳು ನನಗೆ ಸಿಗದಿದ್ದರೂ ಪರವಾಗಿಲ್ಲ. ಆದರೆ ಒಂದೇ ಒಂದು ಸಾರಿ ಏತಕ್ಕೆ ಅವಳು ನನ್ನನ್ನು ತಿರಸ್ಕರಿಸಿದಳು ಎಂದು ಕಾರಣ ತಿಳಿಯಬೇಕು.... ಊರಿಗೆ ಹೋದ ಮೇಲೆ ಹೇಗಾದರೂ ಅವಳನ್ನು ಭೇಟಿ ಮಾಡಬೇಕು. ಒಂದು ವರ್ಷ ನನ್ನ ನಿಷ್ಕಲ್ಮಶ ಪ್ರೀತಿಯ ಜೊತೆ ಆಟ ಆಡಿದ್ದಾಳೆ... ನನಗಾದ ಅನ್ಯಾಯ ಇನ್ಯಾರಿಗೂ ಆಗಬಾರದು ಎಂದು ನಿರ್ಧರಿಸಿ ವಾರದ ನಂತರ ಊರಿಗೆ ಬಂದೆ. ಬಂದಾಗ ನನ್ನ ಡೆಸ್ಕ್ ಮೇಲೆ ರಾಧಾ ಮತ್ತು ಕುಮಾರ್ ಮದುವೆ ಆಹ್ವಾನ ಪತ್ರಿಕೆ ಇತ್ತು. ಅದನ್ನು ನೋಡಿದ ಕೂಡಲೇ ನನಗೆ ಹರಿದು ಬಿಸಾಕಿ ಬಿಡುವಷ್ಟು ಕೋಪ ಬಂದಿತು... ಆದರೂ ಕಂಟ್ರೋಲ್ ಮಾಡಿಕೊಂಡು ಕವರನ್ನು ತೆಗೆದರೆ ಒಳಗಡೆ ಪತ್ರಿಕೆಯೊಂದಿಗೆ ಒಂದು  
ಪತ್ರ ಇತ್ತು!!

ಪತ್ರ ತೆರೆದರೆ...

ಪವನ್....

ನನಗೆ ಗೊತ್ತು ನಿನಗೆ ನನ್ನನ್ನು ಕೊಲ್ಲುವಷ್ಟು ಕೋಪ ಇದೆ ಎಂದು... ಪ್ರೀತಿಸಿ ಮೋಸ ಮಾಡಿದವಳೆಂದು ನೀನು ನನ್ನನ್ನು ಅದೆಷ್ಟೋ ಬೈದುಕೊಂಡಿರಬಹುದು... ಆದರೆ ನಿನ್ನಂಥವರಿಗೆ ಹೀಗೆ ಆಗಬೇಕು. ಪವನ್... ಮೊದಲು ನಾನು ನಿನ್ನನ್ನು ನಿಜವಾಗಿ ಪ್ರೀತಿಸಿದೆ ಕಣೋ... ಆದರೆ ಯಾವಾಗ ನೀನು ಗೀತಾಗೋಸ್ಕರ ನನ್ನ ಗೆಳೆತನ ಮಾಡಿದೆ ಎಂದು ಹೇಳಿದೆಯೋ ಆಗಲೇ ನನಗೆ ಮನಸು ಮುರಿಯಿತು.

ಅಲ್ಲಾ ಪವನ್ ಒಂದು ವಿಷಯ ಕೇಳುತ್ತೇನೆ... ಹುಡುಗಿಯರು, ಹುಡುಗಿಯರ ಪ್ರೀತಿ ಎಂದರೆ ಬಟ್ಟೆ ಬದಲಿಸಿದಷ್ಟು ಸುಲಭ ಎಂದುಕೊಂಡೆಯ... ಮೊದಲು ಅವಳನ್ನು ಇಷ್ಟ ಪಟ್ಟೆ, ಅವಳ ಬಗ್ಗೆ ಯಾರೋ ಏನೋ ಹೇಳಿದರೆಂದು, ನನ್ನನ್ನು ಇಷ್ಟಪಟ್ಟೆ.... ನಾಳೆ ನನ್ನ ಬಗ್ಗೆ ಇನ್ಯಾರೋ ಏನೋ ಹೇಳುತ್ತಾರೆ ಎಂದು,ನನಗೂ ಕೂಡ ಮೋಸ ಮಾಡುವುದಿಲ್ಲ ಎಂದು ಏನು ಗ್ಯಾರಂಟಿ...
ಅಂದೇ ನಿರ್ಧರಿಸಿಕೊಂಡೆ... ನಿನಗೆ ಪ್ರೀತಿಯ ಅನುಭೂತಿ ಕೊಟ್ಟು ಅದನ್ನು ಕಿತ್ತುಕೊಂಡರೆ, ನಿನಗೆ ಪ್ರೀತಿಯ ಮಹತ್ವ ಏನೆಂದು ಅರಿವಾಗುವುದು... ಅದಕ್ಕೆ ಹೀಗೆ ಮಾಡಿದ್ದು. ನಾನು ಕುಮಾರ್ ಸಂಬಂಧಿಗಳೇ ಆಗಿದ್ದರೂ ನಮ್ಮಿಬ್ಬರ ಮಧ್ಯೆ ಯಾವತ್ತೂ ಪ್ರೀತಿ ಇಲ್ಲ... ಈಗಲೂ ಇಲ್ಲ...ಮುಂದೂ ಇರುವುದಿಲ್ಲ... ಆದರೆ ನಿನ್ನ ಮೇಲಿನ ದ್ವೇಶಕ್ಕಷ್ಟೇ  ಅವನನ್ನು ಮದುವೆ ಆಗುತ್ತಿದ್ದೇನೆ...

ಇನ್ಯಾವತ್ತೂ ಪ್ರೀತಿಯ ಜೊತೆ ಆಟ ಆಡಬೇಡ ಪವನ್... ಕಾರ್ಡ್ ಕೊಟ್ಟೆ ಎಂದು ಮದುವೆಗೆ ಬಂದು ಬಿಡಬೇಡ... ನಿನಗೆ ಕಾಗದ ತಲುಪಿಸಬೇಕಿತ್ತು ಅದಕ್ಕೆ ಪತ್ರಿಕೆ ಜೊತೆ ಕೊಟ್ಟಿದ್ದೇನೆ ಹೊರತು ಮದುವೆಗೆ ಕರೆದಿದ್ದೇನೆ ಎಂದು ಮಾತ್ರ ತಿಳಿಯಬೇಡ.

ಗುಡ್ ಬೈ...

ರಾಧಾ ಕಾಗದ ಓದಿದ ಮೇಲೆ ಅವಳ ಮೇಲೆ ಇದ್ದ ಕೋಪ ಹೋಗಿ ಕನಿಕರ ಬಂತು. ಅಯ್ಯೋ ಹುಚ್ಚಿ, ನನ್ನ ಪ್ರೀತಿಯನ್ನು ಅನುಮಾನ ಪಟ್ಟು ಅವನನ್ನು ಮದುವೆ ಆಗುತ್ತಿದ್ದೀಯ... ಅವನು ನಿನಗಿಂತ ಮೊದಲೇ ಗೀತಾಗೆ ಪ್ರಯತ್ನ ಪಟ್ಟವನು.... ನಿನ್ನ ಕಾಗದ ನೋಡಿದರೆ ನೀನೆಷ್ಟು immature ಎಂದು ತಿಳಿಯುತ್ತದೆ... ರಾಧಾ, ನಾನು ಪ್ರೀತಿಯ ಜೊತೆ ಆಟ ಆಡಿದೆನ? ನಾನಲ್ಲ ಆಟ ಆಡಿದ್ದು.... ನೀನು.... ನಿನ್ನಂಥವಳಿಗೆ ನಾನೇಕೆ ನನ್ನತನವನ್ನು ಕಳೆದುಕೊಂಡು ಹೀಗೆ ಒದ್ದಾಡಬೇಕು... ಇನ್ನು ನಾನು ತಲೆ ಕೆಡಿಸಿಕೊಳ್ಳುವುದಿಲ್ಲ... ನೀನಿಲ್ಲದಿದ್ದರೆ ಏನಂತೆ... ಜೀವನ ಸಿಕ್ಕಾಪಟ್ಟೆ ಇದೆ... ಇಷ್ಟಕ್ಕೆ ನಿಲ್ಲುವುದಿಲ್ಲ... ಒಂದು ರೀತಿ ಹೇಳಬೇಕೆಂದರೆ ನೀನು ನನಗೆ ಮೋಸ ಮಾಡಿದ ದಿನವೇ ನನಗೆ ಪ್ರಮೋಷನ್ ಬಂತು... ನಿಜಕ್ಕೂ ನನಗಿದ್ದ ಶನಿ ಬಿಟ್ಟು ಹೋಯಿತು ಎಂದು ನೆಮ್ಮದಿಯಾಗಿರುತ್ತೇನೆ ಎಂದುಕೊಂಡೆ.

ನಂತರ ಸುಮಾರು ಆರು ತಿಂಗಳು ಅದೇ ಕಂಪನಿಯಲ್ಲಿದ್ದು ನಂತರ ಬೇರೊಂದು ಕಂಪನಿಗೆ ಬಂದೆ. ಕಂಪನಿಯಲ್ಲಿ ಪ್ರಾಜೆಕ್ಟ್ ಲೀಡ್ ಸ್ಥಾನ ಕೊಟ್ಟಿದ್ದರು, ಮುಂಚಿನ ಕಂಪೆನಿಗಿಂತ ೩೦% ಹೆಚ್ಚು ಸಂಬಳ ಕೊಟ್ಟಿದ್ದರು. ಎಲ್ಲವೂ ಸುಸೂತ್ರವಾಗಿ ನಡೆಯುತ್ತಿತ್ತು. ಆಗ ಪರಿಚಯ ಆದವಳೇ ನನ್ನ ಬಾಳ ಪುಟದಲ್ಲಿ ಹೆಸರು ಬರೆದ ಮೂರನೇ ಹುಡುಗಿ ವತ್ಸಲ. ವತ್ಸಲ ನೋಡಲು ಮಗುವಿನಂತೆ ಮುದ್ದಾಗಿದ್ದಳು. ಗುಂಡು ಮುಖ ಕಾಂತಿಯುತವಾದ ಕಣ್ಣುಗಳು, ಅರಳು ಹುರಿದಂತೆ ಮಾತಾಡುವ ಅವಳ ಸ್ವಭಾವ ನನಗೆ ಬಹಳ ಅಚ್ಚು ಮೆಚ್ಚಾಗಿತ್ತು. ವತ್ಸಲ ಪರಿಚಯವಾಗಿದ್ದು ನಾನು ಹೊಸದಾಗಿ ರೂಂ ಬದಲಿಸಿದಾಗ ಕೆಳಗಡೆ ಮನೆಯಲ್ಲಿದ್ದ ಹುಡುಗಿ. ಡಿಗ್ರಿ ಮುಗಿಸಿ ಯಾವುದೋ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಳು. ಪ್ರತಿದಿನ ನಾನು ಹೊರಡುವ ಸಮಯಕ್ಕೆ ಅವಳು ಹೊರಡುತ್ತಿದ್ದರಿಂದ ಇಬ್ಬರೂ ಒಬ್ಬರೊನ್ನಬರು ನೋಡುವುದರಿಂದ, ನಗುವಿನಿಂದ ಶುರುವಾಗಿ ಪರಿಚಯವಾಗಿತ್ತು. ವತ್ಸಲ ಸ್ವಭಾವ ಯಾರೇ ಆದರೂ ಕೂಡಲೇ ಅವರ ಜೊತೆ ಹೊಂದಿಕೊಂಡು ಬಿಡುತ್ತಿದ್ದಳು. ಅವಳ ಮಾತಲ್ಲಿ ಅದೊಂದು ರೀತಿ ಮೋಡಿ  ಇತ್ತು. ಎಂಥವರು ಆದರೂ ಮಾತಿಗೆ ಮರುಳಾಗುತ್ತಿದ್ದರು.

ಅವಳ ಬಳಿ ರಾಧಾ ವಿಷಯ ಸಹ ಹೇಳಿದ್ದೆ. ಅವಳು ಅದಕ್ಕೆ ನೋಡು ಪವನ್... ನಿನ್ನಂಥ ಹುಡುಗನನ್ನು ಅವಳು ಬಿಟ್ಟಿದ್ದಾಳೆ ಎಂದರೆ ಅವಳು ನಿಜಕ್ಕೂ ದುರದೃಷ್ಟವಂತೆ ಕಣೋ... ಪವನ್ ನಿನಗೆ ಗೊತ್ತು ನನಗೆಷ್ಟು ಜನ ಸ್ನೇಹಿತರು ಇದಾರೆ ಎಂದು...ನೀನು ನಂಬುತ್ತೀಯೋ ಇಲ್ಲವೋ ಗೊತ್ತಿಲ್ಲ... ನಿನ್ನಷ್ಟು ಕ್ಲೋಸ್ ಫ್ರೆಂಡ್ ಯಾರೂ ಇಲ್ಲ ಕಣೋ. ಬಿಡೋ... ಅವಳ ಬಗ್ಗೆ ಯಾಕೆ ತಲೆ ಕೆಡಿಸಿಕೊಳ್ಳುತ್ತೀಯ...

ವತ್ಸಲ.... ವತ್ಸಲ.... ಮತ್ತೆ ನನ್ನಲ್ಲಿ ಪ್ರೀತಿಯ ಮೊಳಕೆ ಒಡೆಸಿದ್ದಳು... 

ಆದರೆ ಮತ್ತೊಮ್ಮೆ ಭಗ್ನಪ್ರೇಮಿ ಆಗುವ ಆಸೆ ನನಗಿರಲಿಲ್ಲ. ಇನ್ನೊಂದು ಆಘಾತ ತಡೆದುಕೊಳ್ಳಲು ನನ್ನ ಕೈಲಿ ಸಾಧ್ಯವಿರಲಿಲ್ಲ. ವತ್ಸಲ ಬಳಿ ಹೇಗೆ ನನ್ನ ಪ್ರೀತಿಯನ್ನು ಹೇಳುವುದೆಂದು ಪರದಾಡುತ್ತಿದ್ದೆ. ಅದೂ ಅಲ್ಲದೆ ರಾಧಾ ವಿಷಯ ಬಳಿ ಅವಳ ಬಳಿ ಹೇಳಿದ್ದೆ... ಅಂಥದ್ದರಲ್ಲಿ ಅವಳು ನನ್ನನ್ನು ಒಪ್ಪುತ್ತಾಳ? ಒಂದು ವೇಳೆ ಆಗುವುದಿಲ್ಲ ಎಂದುಬಿಟ್ಟರೆ... ಛೇ ಏನಿದು ಹುಚ್ಚು ಮನಸು... ದೇವರೇ ನನಗೆ ಏಕೆ ಹೀಗೆ? ಯಾರಿಗೂ ಕೆಟ್ಟದ್ದು ಬಯಸದ ನನಗೇ  ಏಕೆ ಹೀಗೆ?

ದೇವರೇ... ಯಾಕೋ ಮುಂದಕ್ಕೆ ಓದಲು ನನಗೂ ಭಯ ಆಗುತ್ತಿದೆ, ಒಂದು ವೇಳೆ ಪವನ್ ವತ್ಸಲ ಬಳಿ ಹೇಳಿ ಅವಳೂ ಆಗಲ್ಲ ಎಂದುಬಿಟ್ಟರೆ, ಇವನಿಗೆ ಅದನ್ನು ತಡೆಯುವ ಧೈರ್ಯ ಇರುತ್ತದ? ಹೇಗಾದರೂ ಮಾಡಿ ಅವರಿಬ್ಬರನ್ನು ಒಂದು ಮಾಡಪ್ಪಾ.... ಎಂದು ಮನದಲ್ಲೇ ಪ್ರಾರ್ಥನೆ ಮಾಡಿ ಮೊಬೈಲ್ ಎತ್ತುಕೊಂಡು ಪವನ್ ಗೆ ಕರೆ ಮಾಡಿದೆ. ಹಲೋ... ಪವನ್... ನಾನು ಜಯಂತ್ ಮಾತಾಡುತ್ತಿರುವುದು...

ಸರ್... ನಮಸ್ಕಾರ... ನಿಮ್ಮಿಂದ ಫೋನ್ ಬರುತ್ತದೆ ಎಂದು ನಾನು ಖಂಡಿತ ನಿರೀಕ್ಷಿಸಿರಲಿಲ್ಲ... ಅದೂ ಇಷ್ಟು ಬೇಗ... ಸರ್ ಇದರ ಅರ್ಥ ನೀವು ನನ್ನ ಕಥೆಯನ್ನು ಬರೆಯುತ್ತಿದ್ದೀರ?

ಪವನ್ ನಮಸ್ಕಾರ... ನಿನ್ನ ಕಥೆಯನ್ನು ಬರೆಯಲು ತೀರ್ಮಾನ ಮಾಡಿದ್ದೇನೆ... ಆದರೆ ನಾನಿನ್ನೂ ನಿನ್ನ ಕಥೆಯನ್ನು ಪೂರ್ತಿ ಓದಿಲ್ಲ... ನೀನು ವತ್ಸಲ ಬಳಿ ನಿನ್ನ ಪ್ರೀತಿಯನ್ನು ಹೇಳಲು ಆಗದೆ ಒದ್ದಾಡುತ್ತಿದ್ದೆಯಲ್ಲ ಅಲ್ಲಿಯವರೆಗೂ ಓದಿದ್ದೇನೆ ಅಷ್ಟೇ... ಮೊದಲು ಕಥೆ ಶುರುಮಾಡಿಬಿಡುತ್ತೇನೆ... ಇಲ್ಲಿಯವರೆಗೂ ಬಂದ ಮೇಲೆ ಮಿಕ್ಕಿದ್ದನ್ನು ಓದುತ್ತೇನೆ. ಏಕೆಂದರೆ ನನಗೆ ಮುಂದೆ ಏನಾಗುತ್ತದೋ ಎಂದು ಭಯ ಆಗುತ್ತಿದೆ... ಅದಕ್ಕೆ ಸ್ವಲ್ಪ ಬ್ರೇಕ್ ಬೇಕು...

ಸರ್.. ಬೇಡ ಸರ್... ಈಗಲೇ ಬರೆಯಲು ಶುರು ಮಾಡಬೇಡಿ... ಪೂರ್ತಿ ಓದಿದ ನಂತರವೇ ಶುರುಮಾಡಿ... ಏಕೆಂದರೆ ಇಲ್ಲಿಯವರೆಗೂ ನಿಮಗೆ ಚೆನ್ನಾಗಿದ್ದು ಮುಂದಿನ ಭಾಗ ನಿಮಗೆ ಇಷ್ಟವಾಗದಿದ್ದರೆ ಆಮೇಲೆ ನಿಮಗೆ ನೋವಾಗಬಹುದು...
ಪವನ್ ನನಗೆ ೧೦೦% ನಂಬಿಕೆ ಇದೆ, ಇದು ಖಂಡಿತ ಒಂದೊಳ್ಳೆ ಕಥೆ ಆಗುತ್ತದೆ... ಸಿನೆಮಾ ಕಥೆ ಮಾಡಬಹುದು ಎನಿಸುತ್ತಿದೆ... ನೋಡೋಣ ಮೊದಲು ಬರೆಯಲು ಶುರು ಮಾಡುತ್ತೇನೆ... ಆಮೇಲೆ ನೋಡೋಣ ಎಂದು ಕರೆ ಕಟ್ ಮಾಡಿ ಪವನನ ಕಥೆ ಬರೆಯಲು ಶುರುಮಾಡಿದೆ... ಅವನದೇ ಶೀರ್ಷಿಕೆ "ಬರೆದೆ ನೀನು ನಿನ್ನ ಹೆಸರ"

No comments:

Post a Comment